== ದಂಡಿನಮ್ಮ ದೇವತೆ == ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಅರಕಲಗೂಡು ತಾಲ್ಲೂಕಿನ, ಕಾರಹಳ್ಳಿ ಗ್ರಾಮದಲ್ಲಿ ಪೂಜಿಸಲ್ಪಡುವ ದೇವತೆ. == ಮೂಲ == ಬೆಳವಾಡಿ ಗ್ರಾಮದಲ್ಲಿ ಕಾಶ್ಯಪ ಗೋತ್ರದ, ಶಿವಮ್ಮ ಹಾಗು ಶಂಕರರ ಸುಪುತ್ರಿಯಾಗಿ ಜನಿಸಿದಳು. ಅವಳಿಗೆ ದಯಾಶಂಕರಿ ಎಂದು ನಾಮಕರಣ ಮಾಡಿದರು.ಶಂಕರ(ಶಿವ) ಇವಳ ಆರಾಧ್ಯ ದೈವ. ದಯಾಶಂಕರಿಯು ಎಲ್ಲಾ ಕೆಲಸಗಳಲ್ಲಿಯೂ ನಿಪುಣೆಯಾಗಿದ್ದಳು ಹಾಗೂ ಹಾಡು ಹಸೆಗಳಲ್ಲಿ ಪ್ರವೀಣೆಯಾಗಿದ್ದಳು. ಗ್ರಾಮದ ಅಚ್ಚುಮೆಚ್ಚಿನ ಮಗಳಾಗಿದ್ದಳು. == ದಂಡಿನಮ್ಮನ ಇತಿಹಾಸದ ಕಥೆ == ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಋತುಮತಿಯಾಗುವ ಮುನ್ನ ಮದುವೆ ಮಾಡುತ್ತಿದ್ದರು. ದಯಾಶಂಕರಿಯು ಮದುವೆಗೆ ಮುನ್ನ ಋತುಮತಿಯಾದಳು. ಈ ವಿಷಯ ತಿಳಿದ ಗ್ರಾಮಸ್ಥರು ಹಾಗೂ ಸಂಬಂಧಿಕರು ಅವಳನ್ನು ಕಾಡಿಗಟ್ಟುವುದೆಂದು ನಿರ್ಧರಿಸಿದರು. ಐದನೆ ದಿನ ಮಂಗಳ ಸ್ನಾನವನ್ನು ಮಾಡಿಸಿ ಉಡಿತುಂಬಿ, ಕಣ್ಣನ್ನು ಕಟ್ಟಿ ದಟ್ಟವಾದ ಕಾಡಿಗೆ ಬಿಟ್ಟುಬಂದರು.ಕಾಡಿನಲ್ಲಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಕಳಚಿದಾಗ ಒಂದು ಹುತ್ತವನ್ನು ದಯಾಶಂಕರಿಯು ಮೆಟ್ಟಿನಿಂತಿದ್ದಳು. ಗುಂಪು ಗುಂಪಾಗಿ ಕಳ್ಳಕಾಕರ ದಂಡು ಕುದುರೆಯಿಂದ ಇಳಿಯಿತು. ಆ ದಂಡಿನ ನಾಯಕ ಬಂದು ಎಲ್ಲರನ್ನು ಕಳುಹಿಸಿ ನಾನು ನಿನ್ನನ್ನು ಬಿಡುವುದಿಲ್ಲ ಎಂದ. ದಯಾಶಂಕರಿಯು ಹೆದರದೆ, ನಿಲ್ಲು ನೀನು ನನ್ನನ್ನು ಮುಟ್ಟಿದರೆ ಸುಟ್ಟು ಹೋಗುತ್ತಿ ಎಂದಳು. ದಂಡನಾಯಕನು ಮುಟ್ಟಲು ಮೊದಲಾಗಿ ಅವನು ಜಡವಾಗಿ ಬಿದ್ದನು. ಬರಸಿಡಿಲು ಬಡಿದಂತೆ ಭೂಮಿತಾಯಿಯು ಬಾಯ್ತೆರೆದು ದಯಾಶಂಕರಿಯನ್ನು ಸ್ವೀಕರಿಸಿದಳು. ಅಲ್ಲಿದ್ದ ಅಶ್ವಗಳೆಲ್ಲ ಕಲ್ಲಾಗಿ, ಕಳ್ಳರು ಬಂಡೆಗಳಾಗಿ, ಕುದರೆಗಳನ್ನು ಕಟ್ಟಿದ್ದ ಗೂಟವು ಚಿಗುರಾಗಿ ಹೋದವು. ದಯಾಶಂಕರಿಯು ಶಿಲಾ ರೂಪವನ್ನು ಪಡೆದಳು. ಇಂದಿಗೂ ಸಹ ಶಿಲಾ ಪಾದಗಳು ಅಲ್ಲಿಯೇ ನೆಲೆಸಿವೆ. ಅಂದೇ ಕಾರಹಳ್ಳಿ ಗ್ರಾಮದ ಮುಖ್ಯ ಪಟೇಲರ ಕನಸಿನಲ್ಲಿ ಬಂದು ತಾನು ಇಲ್ಲಿ ನೆಲೆಸಿರುವುದಾಗಿ ಹೇಳಿದಳು. ಅಂದಿನಿಂದ ದಯಾಶಂಕರಿಯು ದಂಡಿನಮ್ಮ ತಾಯಿಯೆಂದು ಹೆಸರಾದಳು. == ಜಾತ್ರಾ ಮಹೋತ್ಸವ == ಪ್ರತಿ ವರ್ಷವೂ ತಾಯಿಯ ಜಾತ್ರಾ ಮಹೋತ್ಸವಕ್ಕೆ ಹಲವಾರು ಕಡೆಯಿಂದ ಭಕ್ತಾದಿಗಳು ಬಂದು ಭಾಗವಹಿಸುತ್ತಾರೆ. ಆ ದಿನ ತಾಯಿಗೆ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಿರುತ್ತದೆ. ತಾಯಿಯು ತನ್ನ ನಂಬಿದ ಭಕ್ತರನ್ನು ಕಾಯುತ್ತಾಳೆ ಎಂಬುದು ನಂಬಿಕೆ. == ಉಲ್ಲೇಖಗಳು ==